ಶುಕ್ರವಾರ, ಏಪ್ರಿಲ್ 29, 2011



ಹಳಿಯದಿರಿ... 

ಇದೀಗ ನಿಮ್ಮ ನೂಕಿ ಹೋದಳಲ್ಲ ಗೆಳೆಯ 
ಅವಳನ್ನು ಮಾತಲ್ಲಿ ಹಳಿಯುವುದ ನಿಲ್ಲಿಸಿರಿ 
ನಿನಗೆ ಸಾದ್ಯವಾದರೆ ಅವಳಿಗಿಂತ ಮುಂದೆ ಸಾಗು 
ಆದರೆ ಮತ್ತೆ ಅವಳ ಮುಂದೆಯೇ ಸಾಗಬೇಡ 
ನಿನ್ನ ಹಿಂದೆಯು ಬಯಸಿಬರುತ್ತಿರಬಹುದು ಹಲವರು
 ಮತ್ತೊಬ್ಬರ ಹಿಂದೆ ನೀ ಸಾಗುವುದು ಇಷ್ಟವಿಲ್ಲ ನನಗೆ 
ಉಕ್ಕೇರುವ ಒಲವ ಸಾಗರದಲೆಗಳು ಎಲ್ಲರೊಳಗೂ ಇರುತ್ತವೆ

ಯಾರೂ ಮತ್ತೊಬ್ಬರ ಅವಲಂಬಿಸಿರುವುದಿಲ್ಲ 
 ಅವಲಂಬಿಸಿರುವುದ ಕಂಡರೆ ಅವಮಾನಿಸುತ್ತಾರೆ
 ಜೀವನದ ಪಯಣದಲ್ಲಿ ಎಲ್ಲವೂ ಇರುತ್ತದೆ 
ಸ್ನೇಹ, ಪ್ರೀತಿ, ಮಮತೆ, ತರ್ಕಗಳೆಲ್ಲ ಮೈಲಿಗಲ್ಲುಗಳೇ
 ನಿಧಾನಕ್ಕೆ ಸವೆಸಿ ಹಿಂದೆಹಾಕಬೇಕಿದೆ ಒಂದೊಂದನ್ನೇ
 ಕಣ್ಣಿಗೆ ಕಾಣುವಂತಿದ್ದರು ಕೆಲವ ಹುಡುಕಬೇಕಿದೆ 
ಕೆಲವು ಮಾತ್ರ ಇದ್ದೂ ಇಲ್ಲದಂತೆ ಕಾಣಬಹುದು
 ಕೆಲವರು ಮಾತ್ರ ಕಾಣದಂತೆ ಹುದುಗಿಸಿಕೊಂಡಿರಬಹುದು 
 ಅದಕ್ಕಾಗೆ ನಿಮ್ಮ ತಳ್ಳಿಹೋದವಳ ಹಳಿಯದಿರಿ 
ಯಾರೊಬ್ಬರು ಮುಂದೆ ನಿಮ್ಮ ನೂಕಿ ಹೋಗದಂತೆ ನಡೆಯುತ್ತಿರಿ...

                                              - ಶಶಿಭಾಗ್ಯಜ ...

ಶುಕ್ರವಾರ, ಏಪ್ರಿಲ್ 15, 2011

ಸುಖವಾಗಿರಲಿ ನನ್ನೊಲವು...



ಸುಖವಾಗಿರಲಿ ನನ್ನೊಲವು...

ಒಲವ ಸುತ್ತ ಸುತ್ತಿಕೊಂಡಿದ್ದ 
 ಸುರುಳಿ ಇದೀಗ ಬಿಚ್ಚಿಕೊಳ್ಳುತಿದೆ
 ಮನದೊಳಗೆಲ್ಲ ಬರೀ ಅದೇ ಸುದ್ದಿ 
 ಒಂದು ಕ್ಷಣ ಏಕಾಂತವಾದರು 
 ತಂತಾನೇ ಎದೆ ಝಲ್ ಎನ್ನುತ್ತದೆ 
 ಹೊತ್ತು ಕಳೆದಂತೆಲ್ಲ ಆತಂಕ ಹೆಚ್ಚಾಗುತ್ತಿದೆ

 ನಾ ಮಾರ್ಧನಿಸದೆ ಅಳುತ್ತಿರುವ ಸದ್ದು 
 ನನ್ನವಳ ಕರ್ಣವ ಇನ್ನೂ ತಾಕಲಿಲ್ಲವೇನೋ
 ತಾಕಿದರು ತಾನೆ ಅವಳಾದರು ಏನ ಮಾಡಾಳು 
ಬಿಡುವಿಲ್ಲ ಈಗವಳಿಗೆ ಯಾವುದನ್ನೂ ನೆನೆಸಿಕೊಳ್ಳಲು
 ನಿದ್ರೆಯಲ್ಲೂ ನಗುವೆಂಬುದು ಮರೆತೋಗಿದೆ ನನಗೆ

 ಅಟ್ಟಹಾಸಗೈಯ್ಯುತ್ತಿವೆ ರಾಕ್ಷಸೀ ಮನಸ್ಥಿತಿಗಳು 
 ಪ್ರೇಮಕ್ಕೆ ಬೆಟ್ಟದಂತೆ ಅಚಲ ಅಡ್ಡವಾಗಿದ್ದವರೆಲ್ಲ 
ಇಂದು ಸಮುದ್ರದಂತೆ ಚಲನೆ ತೆಗೆದುಕೊಂಡಿದ್ದಾರೆ
 ನನ್ನೊಲವ ಹಡಗ ಮುಳುಗಿಸಲು
 ಎತ್ತ ಸಾಗಿದರತ್ತ ನೀರ್ಗಡ್ಡೆಗಳಾಗಿ ನಿಂತಿದ್ದಾರೆ

 ಸುಖವಾಗಿರಲಿ ನನ್ನೊಲವು ನಾಳೆ ಹಸೆ ಏರಿದ ನಂತರ 
 ನಾನವಳ ಮರೆಯುವುದಿಲ್ಲ 
 ಮರೆತು ಮಂದಹಾಸಗೈಯುವುದಿಲ್ಲ 
 ಅವಳ ಹೆಸರಲ್ಲಿ ಕವಿತೆ ಕಟ್ಟುತ್ತೇನೆ, 
 ನನ್ನೊಳಗಿನ ಕನವರಿಕೆಗಳಿಗೆ ಜೀವ ನೀಡುತ್ತೇನೆ
 ಮರೆಯಾದ ನನ್ನೊಲವ ಸೇರಲು ದಾರಿ ಹುಡುಕುತ್ತೇನೆ 
 ಮರುಜನ್ಮದಲ್ಲಿಯಾದರು ಸರಿ
 ಒಲವ ಉಳಿಸಿಕೊಡೆಂದು ಒಲವನ್ನೊಮ್ಮೆ ಪ್ರಾರ್ಥಿಸುತ್ತೇನೆ 
- ಶಶಿಭಾಗ್ಯಜ ...

ಶನಿವಾರ, ಏಪ್ರಿಲ್ 9, 2011

ಬಾ ಗೆಳತಿ...



ಬಾ ಗೆಳತಿ...


ಬಾ ಗೆಳತಿ ನನ್ನೊಲವಿನ ರಥಕ್ಕೆ ಸಾರಥಿಯಾಗು 
 ಸರಿಪಥದಲ್ಲಿ ಸರಿಯಾಗಿ ಸಾಗಿಸು ಬಾ 
 ಈ ಜೀವನ ರಣರಂಗದ ದಾರಿ ಬಲು ಕಠಿಣ 
 ನೂರೆಂಟು ಅಡೆ ತಡೆ ಭೀಕರ ಬಯಲಿದು 

 ನಾನೇನು ಅರ್ಜುನನಲ್ಲ ಹೆದರಿ ಕೂರುವುದಿಲ್ಲ
 ನೀನೇನು ಶ್ರೀಕ್ರಿಷ್ಣನಾಗಿ ಉಪದೆಶವೀಯಬೇಕಿಲ್ಲ 
 ಪ್ರತಿ ಆಪತ್ತುಗಳಲ್ಲಿ ನನ್ನನ್ನ ಕಾಪಾಡಬೇಕಿಲ್ಲ 
ನಾನೇ ಹೋರಾಡಿ ಕೊನೆವರೆಗೆ ಕೊಂಡೊಯ್ಯುವೆ 

 ಜೀವನದಲಿ ನಾ ರಣ ಹೇಡಿಯಲ್ಲ 
 ಗುರುಹಿರಿಯರನ್ನ ಕದನಕ್ಕೆಳೆಯುವುದಿಲ್ಲ
 ನೀನೇನು ಕುಟಿಲೋಪಾಯದಿಂದ ಗೆಲ್ಲಿಸಬೇಕಿಲ್ಲ 
ಯಾರನ್ನು ಸಾಯಿಸುವ ಮನಸ್ಸು ನನಗಿಲ್ಲ 

 ನೀನೇನು ರಾಜ್ಯಲಕ್ಷ್ಮಿಯಲ್ಲ 
ಹಿಂದೆ ಮತ್ತಿನ್ನಾರಿಗೋ ಕಳೆದುಕೊಂಡಿಲ್ಲ 
 ಗೆದ್ದು ಮತ್ತಿನ್ನಾರಿಗೋ ಧಾರೆಯರೆಯಬೇಕಿಲ್ಲ 
ಯಾರ ಮೇಲು ದ್ವೇಷ ಸೇಡ0ತು ಇಲ್ಲವೇ ಇಲ್ಲ

 ನಾನೇನು ಸ್ವಾರ್ಥಿಯಲ್ಲ 
ಸಶರೀರನಾಗಿಯೇ ಸ್ವರ್ಗವ ತಲುಪಬೇಕಿಲ್ಲ
 ದೇವತೆಗಳ ಜತೆ ಆಸನವ ಹಂಚಿಕೊಳ್ಳಬೇಕಿಲ್ಲ 
ನನಗೇನು ಸಿಗದಿದ್ದನ್ನು ಸಾಧಿಸುವ ಛಲವಿಲ್ಲ 

 ಜೀವನದಲ್ಲಿ ನಾ ಮಹತ್ತರವಾದುದ ಬಯಸುವುದಿಲ್ಲ 
ಕಂಡದ್ದನ್ನೆಲ್ಲ ದಕ್ಕಿಸಿಕೊಳ್ಳುವ ಹಂಬಲವಿಲ್ಲ 
ನಿನ್ನ ಹೊರತು ಮತ್ತಿನ್ನಾರಿಗೋ ಇನಿಯನಾಗುವುದಿಲ್ಲ 
 ಬೇಗ ಬಂದು ಈ ಜೀವನ ರಥವ ಕೂಡಿಕೊಳ್ಳುವೆಯಲ್ಲ 

- ಶಶಿಭಾಗ್ಯಜ ...

ಶುಕ್ರವಾರ, ಏಪ್ರಿಲ್ 1, 2011

ಅಸ್ತು ಎಂದರೆ ಸಾಕು..



ಅಸ್ತು ಎಂದರೆ ಸಾಕು... 

ನೀನೊಮ್ಮೆ ಅಸ್ತು ಎಂದರೆ ಸಾಕು
  ನಾ ಅಸ್ತಂಗತನಾಗುವೆ ಗೆಳತಿ

 ಮರಳುಗಾಡಿನ ಮರಳ ಮೇಲೆ ನಿನ್ನೆಸರಾಗುವೆ 
 ನೀ ಬೇಡವೆಂದು ಬಿರುಗಾಳಿಯಾಗಿ 
ಒಮ್ಮೆ ನೀ ಅಸ್ತು ಎಂದರೆ ಸಾಕು 
ನಿನ್ನ ಧಾಳಿಗೆ ಸಿಲುಕಿ ಅಸ್ತಂಗತನಾಗುವೆ 

 ಕಡಲೊಳಗೆ ಅಲೆಯಾಗುವೆ 
 ಕುಪ್ಪಳಿಸಿ ಬಂದು ದಡವಾದ ನಿನ್ನನ್ನಪ್ಪಳಿಸುವೆ 
ನಿನಗೆ ಬೇಡವೆನಿಸಿ ಅಸ್ತು ಎಂದರೆ ಸಾಕು 
ಮತ್ತೆ ಹಿಂದುರಿಗಿ ವಾರಿದಿಯೊಳಗೆ ಅಸ್ತಂಗತನಾಗುವೆ

 ನಿನ್ನ ಬೆಳಗುವ ರವಿಯಾಗುವೆ 
 ಹಗಲೆಲ್ಲ ಭುವಿಯಾದ ನಿನ್ನ ಸನಿಹದಲ್ಲಿರುವೆ 
 ನೀ ನಿಷೆಯ ಇಚ್ಚಿಸಿ ಅಸ್ತು ಎಂದರೆ 
ಸಾಕು ಬಾನ ಮೂಲೆಗೆ ಸರಿದು ಅಸ್ತಂಗತನಾಗುವೆ 

ಅಲ್ಲೆಲ್ಲ ಅಸ್ತಂಗತನಾಗುವುದು ಕ್ಷಣಿಕವೇ ನಿಜ 
 ಏಕೆಂದರೆ ಮತ್ತೆ ಮತ್ತೆ ನಿನ್ನಿಂದ ಅಸ್ತು ಎನ್ನಿಸಿಕೊಳ್ಳಬಯಸುವೆ 
ಅದಕಾಗೆ ನೀ ಅಸ್ತು ಎಂದರೆ ಸಾಕು 
 ಅಸ್ತಂಗತನಾದರು ಬಿಡದೆ ಮತ್ತೆ ಮತ್ತೆ ಬರುವೆ 

 ಆದರೆ 
ಈ ಜೀವನವಿದೆಯಲ್ಲ ಗೆಳತಿ 
 ಇಲ್ಲಿ ಅಸ್ತಂಗತನಾಗಲಿಕ್ಕಾಗುವುದು ಒಂದೆ ಬಾರಿ 
 ಇಲ್ಲೂ ನಾ ನಿನಗೆ ಬೇಸರವೆನಿಸಿ ನೀ ಅಸ್ತು ಎನ್ನುವುದಾದರೆ 
 ನಾ ನಿನ್ನಿಂದ ಅಸ್ತಂಗತನಾಗುವೆ ಮರಳಿ ಬರದೆ 
 ಮರಳಿ ಬಾರದೆ......... 


ಶಶಿಭಾಗ್ಯಜ ...