ಮಂಗಳವಾರ, ಮಾರ್ಚ್ 29, 2011

ಸನಿಹ



ಸನಿಹ... 

ನಾನೆಂದು ಅಂಜುತ್ತಿದ್ದೆ 
 ನಿನ್ನ ಕಾಣಲು, ಒಮ್ಮೆ ಸ್ಪರ್ಶಿಸಲು
 ಹಾಗಿತ್ತು ನಿನ್ನ ಬಿಸಿ ಸನಿಹ 
 ಏಕೆಂದರೆ ನೀ ಕಾಡುವ ಕಣ್ಣೀರಾಗಿದ್ದೆ 

 ನಾನೆಂದು ಹೆದರುತ್ತಿದ್ದೆ 
 ನಿನ್ನೊಂದಿಗೆ ಮಾತನಾಡಲು 
 ಹಾಗಿತ್ತು ನಿನ್ನ ಮೌನ 
 ಏಕೆಂದರೆ ನೀ ನಿನ್ನ ವಿರಹವನ್ನೆಲ್ಲ ಕಣ್ಣಲ್ಲೇ ಸೂಸುತ್ತಿದ್ದೆ 

 ನಾನೆಂದು ಬೆಚ್ಚುತ್ತಿದ್ದೆ 
 ನಿನ್ನನ್ನೊಮ್ಮೆ ಕನಸಿನಲ್ಲಿ ಸಂದಿಸಲು 
 ನೀ ದೂರಾಗುವೆಯೇನೋ ಎಂದು ಭ್ರಮಿಸುತಿದ್ದೆ 
 ಆದರೆ ನೀ ಆ ಕತ್ತಲಲ್ಲೂ ನನ್ನ ಭ್ರಮೆಗಳ ಬೆತ್ತಲಾಗಿಸಿದೆ 

- ಶಶಿಭಾಗ್ಯಜ ...

ಸೋಮವಾರ, ಮಾರ್ಚ್ 28, 2011

ಹಂಬಲ



ಹಂಬಲ.. 
ನನ್ನವಳಿಗೆ ಸದಾ 
 ನನ್ನೊಳಗೊಂದಾಗುವ ಹಂಬಲ 

 ಮುಗಿಲೊಳಗೆ ಹನಿಯಾಗಿ 
 ಸಮಯ ಸಿಕ್ಕಾಗಲೆಲ್ಲ 
 ನಾನೆಂಬ ಭುವಿಯ ಸೇರುವ ಹಂಬಲ

 ನಭದೊಳು ನಕ್ಷತ್ರವಾದರೂ 
 ಉಲ್ಕೆಯಾಗಿ ಸಿಡಿದು ಬಂದು 
 ನನ್ನ ಮುತ್ತಿಕ್ಕುವ ಹಂಬಲ 

 ಭೋರ್ಗರೆದು ಮೊರೆವ ಕಡಲಾದರು
 ಅಲೆ ಅಲೆಯಾಗಿ ಅಪ್ಪಳಿಸಿ
 ದಡವಾದ ನನ್ನನ್ನೊಮ್ಮೆ ತಾಕುವ ಹಂಬಲ 

 ಕಣ್ಣಲ್ಲಿ ಬೀಳುವ ಕಣ್ಣೀರಾದರು 
ಕರಗಿಹೋಗುವ ಮುನ್ನ 
 ನನ್ನ ಕೆನ್ನೆಯ ಮೇಲೆಯೇ ಹರಿವ ಹಂಬಲ 

 ನಾನು ನಿಜಕ್ಕೂ ಅದೃಷ್ಟವಂತ
 ಏಕೆಂದರೆ ಬೇರೆಲ್ಲೂ ಕಾಣೆ 
 ಯಾರಲ್ಲೂ ನನ್ನವಳಿಗಿರುವಂತಹ ಹಂಬಲ

- ಶಶಿಭಾಗ್ಯಜ ...

ಸೋಮವಾರ, ಮಾರ್ಚ್ 21, 2011

ಒಬ್ಬಂಟಿ ನಾನು



ಒಬ್ಬಂಟಿ ನಾನು ..


ಹೇ ಸಾವೆ 
ನಿನಗೂ ಪ್ರಿಯನಾದನೆ 
 ನನ್ನ ಪ್ರಿಯಕರ 

 ಅಥವಾ
 ನಮ್ಮ ಪ್ರೇಮವ ಕಂಡು ಸಹಿಸಲಾರದಾದೆಯ
 ನಮ್ಮ ನೋಡಿ ನಿನಗೂ ಹಲುಬುವಂತಾಯಿತೆನು

 ಒಂದು ಕ್ಷಣ ನೀ ಸುಮ್ಮನಿದ್ದರೆ ಸಾಕಿತ್ತು 
ಸಾಗರದಾಚೆಯಾದರೂ ಹೋಗಿ ಬದುಕುತ್ತಿದ್ದೆವು
 ಸಾವಿಲ್ಲದೂರ ಸೇರಿಕೊಳ್ಳುತ್ತಿದ್ದೆವು

 ಈಗ ಎಲ್ಲವೂ ಮುಗಿಯಿತು 
 ಹೇ ಜವರಾಯ ನನ್ನ ಕಣ್ಣೀರಿಗೂ ಕರಗಲಾರೆಯ
 ನನ್ನವನ ನನಗೆ ತಿರುಗಿ ನೀಡಲಾರೆಯ 

 ಏನು ಕೊಡಲಾರೆಯೇನು 
ಸಂತೋಷವೆ ನಿನಗೆ ಈಗ ಒಬ್ಬಂಟಿ ನಾನು 
 ಈಗ ನಿನಗೆ ನಿನ್ನಾಸೆ ತಣಿಯಿತೆನು 

ಆಯಿತು ನಾನೂ ನನ್ನವನ ಸೇರುವೆ ಬಿಡು
 ನನ್ನಿನಿಯನಿಲ್ಲದಿದ್ದಲ್ಲಿ ನನಗಾದರೂ ಕೆಲಸವೇನು 
 ನಾನೂ ನಿನ್ನೂರಿಗೆ ಬರುವೆ 
 ನನ್ನವನ ಜೊತೆಗೊಂದಿಷ್ಟು ಜಾಗ ನೀಡು........ 


- ಶಶಿಭಾಗ್ಯಜ ...

ಶುಕ್ರವಾರ, ಮಾರ್ಚ್ 18, 2011

ಕಥೆ ಹೇಳುತ್ತಿವೆ ಕುರುಡು ಕಣ್ಣುಗಳು

ಗೆಳೆಯರೆ ಇದು ಭೋಪಾಲ್ ಅನಿಲ ದುರಂತದ ಬಗೆಗಿನ ತೀರ್ಪು ಬಂದಾಗ ಬರೆದ ಕವನ ಆದರೆ ಮತ್ತೆ ಜಪಾನಿನಲ್ಲಿ ಅಂತದ್ದೇ ಒಂದು ದುರಂತ ನಡೆದು ಜನರ ಜೀವನ ಅಸ್ತವ್ಯಸ್ತ ವಾಗಿದೆ ಅದಕ್ಕಾಗಿ ಇದನ್ನು ಈಗ ತಮ್ಮಗಳ ಮುಂದೆ ಇಡುತ್ತಿದ್ದೇನೆ ಧನ್ಯವಾದಗಳು


<

 ನಿರಂತರ ನಡೆಯುತ್ತಿದೆ ಪಯಣ 
 ಕನಸುಗಳೇ ಇಲ್ಲದ ಕವಲು ದಾರಿಗಳಲ್ಲಿ 
 ಪ್ರತಿ ಹೆಜ್ಜೆಯು ಪ್ರತಿದ್ವನಿಸುತ್ತಿದೆ 
ಈ ಬದುಕು ಘೋರ ಘೋರ........ 


 ಇಂದೋ ನಾಳೆಯೋ ನಾಳಿದ್ದೋ ಸುಧಾರಿಸಬಹುದ 
ಕವಲೊಡೆದ ಬದುಕುಗಳು ಕಣ್ತೆರೆಯಬಹುದ 
ವರುಷಗಳಿಂದ ಆರ್ತಿಸುತ್ತಿರುವ ನೋವಿನ ನರಳಾಟ 
ಮುಂದಾದರು ಅಂತ್ಯದೆಡೆಗೆ ತೆರಳಬಹುದಾ....? 


 ಅಗಣಿತ ಕನಸುಗಳು ಅಜೀವಗೊಂಡಿವೆ 
 ಹೊಸ ಕನಸಕಾಣಲು ಕಣ್ಣುಗಳೇ ಇಲ್ಲವಾಗಿವೆ 
 ಸಾಂತ್ವಾನ ಹೇಳುವ ಮನಸ್ಸುಗಲಿಲ್ಲ 
 ಕೈ ಹಿಡಿದು ಮುನ್ನಡೆಸಲು ಮತ್ತೊಂದು ಕರವಿಲ್ಲ 


 ಮುಂದಣ ಹೆಜ್ಜೆ ಇಡಲು ಮನಸ್ಸಿಲ್ಲ 
 ಇರುವ ಕಾಲುಗಳಲ್ಲಿ ಬಲವಿಲ್ಲ 
 ಪ್ರತಿಯೊಂದು ಮುನ್ನಡೆಗಳಿಗೂ ನೆರವು ಬೇಕಿದೆ 
ಆಸರೆಗಾಗಿ ಪ್ರತಿಕ್ಷಣ ಅಂಗಲಾಚುವಂತಾಗಿದೆ 


 ನೋಡೀಗ ನನ್ನ ಮನಸ್ಸು ನನ್ನ ಮಾತೆ ಕೇಳುತ್ತಿಲ್ಲ 
 ನೀ ಹಾಡಿದ ಮಾತ ಕೇಳುವ ಭಾಗ್ಯವಂತು ಇಲ್ಲ 
ಅಸ್ವಸ್ತತೆಯ ಹಾದಿಯಲ್ಲಿ ನಿರಂತರ ಹೋರಾಟ 
 ಮಾನಸಿಕ ದೌರ್ಬಲ್ಯದ ಎರಕ ಮೂರ್ತಿಯಾದೆ ನಾ 


 ಹೌದು ಇಲ್ಲಿ ನಿರಂತರ ಕಥೆ ಹೇಳುತ್ತಿವೆ 
 ನಾಳಿನ ಜಗವ ನೋಡಲಾಗದ ಕುರುಡು ಕಣ್ಣುಗಳು 
ನೋಡಿದವರೆದೆಯಲ್ಲಿ ಚಪ್ಪಾಳೆ ಬಡಿಯುತ್ತಿವೆ 
 ಇಂಚು ಸರಿಸಲಾಗದ ನನ್ನ ಕೈಗಳು 


 ಮನಸ್ಸಿರುವವರ ಮನಸ್ಸಿನಮೇಲೆ ದಾವಂತದ ಹೆಜ್ಜೆ ಹಿಡುತ್ತಿವೆ 
ಮುಂದಡಿಯಿಡಲಾಗದ ನನ್ನ ಕಾಲುಗಳು 
 ಕೂಗಿ ಕೂಗಿ ನಿನ್ನ ಕರೆಯುತ್ತಿವೆ 
 ದಶಕಗಳಿಂದ ಒಂದೇ ಒಂದು ಶಬ್ದ ಹೊರಡಿಸದ ನಾಲಗೆ 


ಇಲ್ಲ ಕ್ಷಮಿಸುವುದಿಲ್ಲ 
ನಿನ್ನ ಇಂಥ ಘೋರವೆಸಗಿದ ಕಾಲವೇ ನಿನ್ನ 
 ನಿನ್ನತ್ತ ಬೇಗ ಕರೆದುಕೊಳ್ಳದ ಅಂತ್ಯವೆ ನಿನ್ನ 


 ಇಲ್ಲ ಮನ್ನಿಸುವುದಿಲ್ಲ 
ನಿನ್ನ ಜಗವನಾಳುವ ದೊರೆತನವೆ ನಿನ್ನ 
ಬಂಡವಾಳಶಾಹಿತ್ವಕ್ಕೆ ಮಣೆಹಾಕುವ ನಿನ್ನ 


 ಇಲ್ಲ ಅಭಿನಂದಿಸುವುದಿಲ್ಲ ನಿನ್ನ 
 ಕಡೆಗಣಿತರಾದವರತ್ತ ಕರುಣೆ ಇಲ್ಲದ ಕಾನೂನೇ ನಿನ್ನ 
ನನ್ನ ನೊಂದ ಬದುಕಿಗೆ ನ್ಯಾಯ ದೊರಕಿಸದ ನಿನ್ನ 
 ಇಲ್ಲ ಕ್ಷಮಿಸುವುದಿಲ್ಲ......... 
ಇಲ್ಲ ಕ್ಷಮಿಸುವುದಿಲ್ಲ................

ಶಶಿಭಾಗ್ಯಜ

ಮಂಗಳವಾರ, ಮಾರ್ಚ್ 15, 2011

ಹೆದರದಿರು ನನ್ನೊಲವೆ


ಹೆದರದಿರು ನನ್ನೊಲವೆ 
 ನಾನಿರುವೆ ನೆಳಲಾಗಿ
 ಬಿಸಿಲಿಗೆ ಕೊಡೆಯಾಗಿ
 ನಿನ್ನೆದೆಯ ದೆಗೆಗೆ ತಂಪಾಗಿ
 ಬೇಸಿಗೆಗೆ ಬೀಸಣಿಗೆಯ ಗಾಳಿಯಾಗಿ
 ಗಾಳಿ ಸೃಷ್ಟಿಸುವ ಹಸಿರು ಮರವಾಗಿ

 ಹೆದರದಿರು ನನ್ನೊಲವೆ 
 ನಾನಿರುವೆ ರಕ್ಷೆಯಾಗಿ 
 ಜಗವ ನೀ ನೋಡಲು ದೃಷ್ಟಿಯಾಗಿ 
ಎಲ್ಲವೂ ನಿನ್ನರಿವಿಗೆ ಬರಲು ಸಮಷ್ಟಿಯಾಗಿ 
 ರಕ್ಷಿಸಲೆಂದೆ ಹುಟ್ಟಿದಂತಹ ರೆಪ್ಪೆಯಾಗಿ

 ಹೆದರದಿರು ನನ್ನೊಲವೆ
 ನಾನಿರುವೆ ನಿನ್ನ ಮನದ ಪ್ರತಿರೂಪವಾಗಿ
 ಕನ್ನಡಿಯೊಳಗೆ ನಿನ್ನ ಪ್ರತಿಬಿಂಬವಾಗಿ
 ನೀ ಕಾಣುವ ಕನಸುಗಳಿಗೆ ಕಣ್ಣುಗಳಾಗಿ 
ನಿನ್ನ ಬಾಳ ನೌಕೆಯ ನೂಕುವ ನಾವಿಕನಾಗಿ
 ಬಾಳ ಬಯಲೊಳಗೆ ನೀ ನಡೆವಾಗ
 ತಡವರಿಸದಿರಲು ದಾರಿಯಾಗಿ
 ನಾನಿರುವೆ ನನ್ನೊಲವೆ 
ಹೆದರದಿರು ಹೆದರದಿರು.............
ಶಶಿಭಾಗ್ಯಜ

ಗುರುವಾರ, ಮಾರ್ಚ್ 3, 2011

ನಾವು ನಾವಾಗಿದ್ದರೆ .



ನಾವು ನಾವಾಗಿದ್ದರೆ . 

ಹೌದು ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಲಾಭ ನಷ್ಟಗಳೆಂಬ ತಖ್ತೆಗಳ
 ಸುಳಿಯೊಳಗೆ ಸಿಲುಕಿ 
 ಪ್ರೀತಿ ಪ್ರೇಮಗಳ ಮನದೊಳಗೆ ಮೆಟ್ಟಿ
 ವಿರಹದುರಿಯಲ್ಲಿ ನರಳಿ 
ನೋಡುವ ಜಗತ್ತಿಗಾಗಿ ಒಲವ 
ಆಟ ಕಟ್ಟುವ ಬದಲು 
ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಮನ ಒಲ್ಲದ ತನುವ 
 ಬಳಸಿ ಬಸವಳಿದು 
 ನೋವ ಮರೆಮಾಚಲು 
 ರಾತ್ರಿ ಚುಕ್ಕಿಯ ನೋಡಿ ನಗುವ ಹರಿಸಿ 
 ನಾಟಕವಾಡುವ ಬದಲು 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ನಮ್ಮೊಳಗೆ ನೋವ ಮುಚ್ಚಿಟ್ಟು
 ನಮಗಾಗಿಯೆ ಎಂಬ ಭ್ರಮೆಯಲ್ಲಿ 
ಹೆಂಡತಿ ಮಕ್ಕಳೆಂಬ ಒಡನಾಡಿಗಳಿಗಾಗಿ
 ಕೊನೆವರೆಗೂ ಒದ್ದಾಡಿ 
 ಕೊನೆಗೊಂದು ದಿನ ಎಲ್ಲವನ್ನೂ 
ಅವರಿಗೊಪ್ಪಿಸುವ ಬದಲು 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಕಷ್ಟ ನಷ್ಟಗಳ ಲೆಕ್ಕವಿಡದೆ 
 ಸಮಾಜದೆದುರು ನಗುನಗುತ್ತಾ
 ಒಳಗೆ ಹಸಿವಿದ್ದರು 
 ಮೇಲೆ ಸಂತೃಪ್ತಿಯ ಮುಖವಾಡ ಧರಿಸಿ 
 ಈ ಹೊರ ಜಗತ್ತಿನಲ್ಲಿ ಪುರುಷೋತ್ತಮ 
 ಎಂದೆನ್ನಿಸಿಕೊಳ್ಳಲು ಒದ್ದಾಡುವ ಬದಲಿಗೆ 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ನಾಲ್ಕು ದಿನಗಳ ಜೀವನ ಯಾತ್ರೆ 
 ನಡೆಸಿದಷ್ಟೂ ದಿನ ಬರೀ ಹೋರಾಟ
 ಆಟ ಮುಗಿಸುವುದರೊಳಗೆ 
 ಇನ್ನಿಲ್ಲದ ಭಾವ ತಾಕಲಾಟ 
 ಈ ಅಶಾಶ್ವತ ಹರ-ಚರಗಳೊಳಗೆ 
ಸಿಲುಕಿ ಇನ್ನಿಲ್ಲದ ಮನ ವ್ಯಾಕುಲತೆ ತಳೆದು 
ಕೊನೆಗೊಂದು ದಿನ ಯಾನ ಮುಗಿಸುವವರೆಗೆ 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 
ಅದೆಷ್ಟು ಸೊಗಸಿ ತ್ತು ........ 

- ಶಶಿಭಾಗ್ಯಜ ...